ಮೂಡುಬಿದಿರೆ: ಇಂದಿನ ಸ್ಪರ್ಧಾತ್ಮಕ ಯುಗದ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಆಯ್ಕೆಯಾಗುವುದಕ್ಕಿಂತ ತಿರಸ್ಕಾರಗೊಳ್ಳುವವರೆ ಹೆಚ್ಚಾಗುತ್ತಿರುವುದು ಖೇದನೀಯ ಎಂದು ಸೈಂಟ್ ಅಲೋಷಿಯಸ್ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕರಾದ ಡಾ. ನೋರ್ಬಟ್ ಲೋಬೋ ಹೇಳಿದರು.
ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಅರ್ಥಶಾಸ್ತ್ರ ವಿಭಾಗವು ಆಯೋಜಿಸಿದ್ದ ಅರ್ಥಶಾಸ್ತ್ರ ಕಲಿಕೆಯ ಉಪಯೋಗಗಳು ಬಗ್ಗೆ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಇಂದು ನಿರುದ್ಯೋಗವು ಸಮಾಜದಲ್ಲಿ ಮುಖ್ಯ ಸಮಸ್ಯೆಯಾಗಿ ಕಾಡುತ್ತಿದ್ದು, ಉದ್ಯೋಗಾಕಾಂಕ್ಷಿಗಳು ಅಧಿಕ ವೇತನದ ಉದ್ಯೋಗಗಳನ್ನು ಬಯಸುವುದೇ ಇದಕ್ಕೆ ಮೂಲ ಕಾರಣ. ಅಲ್ಲದೆ, ಅತ್ಯಾಧುನಿಕ ತಂತ್ರಜ್ಞಾನದ ಅಭಿವೃದ್ಧಿಯು ಮಾನವನ ಉದ್ಯೋಗಾವಕಾಶವನ್ನು ಕಸಿದುಕೊಳ್ಳುತ್ತಿದೆ. ಇದರಿಂದ ಅನೇಕರು ನಿರುದ್ಯೋಗದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದು ಹೇಳಿದರು.
ಯುವ ಜನಾಂಗವು ವಿಭಿನ್ನ ಚಿಂತನೆಗಳನ್ನು ಹೊಂದಿರುತ್ತಾರೆ, ಆದರೆ ಅದನ್ನು ಪ್ರಸ್ತುತ ಪಡಿಸುವಲ್ಲಿ ವಿಫಲರಾಗುತ್ತಿದ್ದಾರೆ. ನಮ್ಮಲ್ಲಿ ಶಿಕ್ಷಣದ ಜೊತೆಗೆ ಸಾಮಾರ್ಥ್ಯ, ಬದ್ಧತೆ, ಗುರಿ, ಆಸಕ್ತಿ ಇದ್ದಾಗ ಮಾತ್ರ ಒಳ್ಳೆಯ ಉದ್ಯೋಗವನ್ನು ಪಡೆಯಬಹುವುದು” ಎಂದರು.
ಆಳ್ವಾಸ್ ಕಾಲೇಜಿನ ಪ್ರಾಶುಂಪಾಲ ಡಾ.ಕುರಿಯನ್ ಮಾತನಾಡಿ, ಅರ್ಥಶಾಸ್ತ್ರದ ತತ್ವಗಳನ್ನು ಸರಿಯಾಗಿ ಅರಿತು, ಅದನ್ನು ಪರಿಪಾಲಿಸಬೇಕು. ದಿನ ನಿತ್ಯದ ಜೀವನದಲ್ಲಿ ಅರ್ಥಶಾಸ್ತ್ರದ ವಿಷಯ ವಸ್ತುವನ್ನು ಅಳವಡಿಸಿಕೊಳ್ಳುವುದು ಅಗತ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಾಣಿಜ್ಯ ವಿಭಾಗದ ಡೀನ್ ಉಮೇಶ್ ಶೆಟ್ಟಿ, ವಿಭಾಗದ ಮುಖ್ಯಸ್ಥೆ ಹರಿಣಾಕ್ಷಿ ಉಪಸ್ಥಿತರಿದ್ದರು. ವಿದ್ಯಾರ್ಥಿ ರಾಹುಲ್ ಕಾರ್ಯಕ್ರಮ ನಿರೂಪಿಸಿದರು.