ವಿದ್ಯಾಗಿರಿ: ಕಾಲೇಜಿನ ಬೆಳವಣಿಗೆಯಲ್ಲಿ ಉಪನ್ಯಾಸಕರ ಪಾತ್ರ ಪ್ರಮುಖವಾಗಿದ್ದು, ಹೊಸ ಯೋಜನೆಗಳನ್ನು ನಿಭಾಯಿಸುವಲ್ಲಿ ಜವಾಬ್ದಾರಿಯುತ ನಡೆ ಅಗತ್ಯ ಎಂದು ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ತಿಳಿಸಿದರು.
ಅವರು ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ನಡೆದ “ಸ್ನೇಹ ಕೂಟ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವ್ಯಕ್ತಿಯ ವ್ಯಕ್ತಿತ್ವ ತಿಳಿದುಕೊಳ್ಳಲು ಪ್ರತಿಭೆಗಳು ಸಹಕಾರಿಯಾಗಿವೆ. ವರ್ಷವಿಡೀ ವಿದ್ಯಾರ್ಥಿಗಳಿಗೆ ಕಲಿಸುತ್ತಾ, ವೃತ್ತಿನಿರತರಾದ ಉಪನ್ಯಾಸಕರಿಗೆ ತಮ್ಮಲ್ಲಿದ್ದ ಪ್ರತಿಭೆಗಳನ್ನು ಹೊರಹಾಕಲು ಹಾಗೂ ಆತ್ಮೀಯತೆಯಿಂದ ಒಬ್ಬರನ್ನೊಬ್ಬರು ಬೆರೆಯುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಉಪನ್ಯಾಸಕ ವೃಂದದವರಿಗೆ ತಮ್ಮಲ್ಲಿನ ಪ್ರತಿಭಾ ಪ್ರದರ್ಶನಕ್ಕಾಗಿ ವೇದಿಕೆಯನ್ನು ಕಲ್ಪಿಸಿಕೊಡಲಾಗಿತ್ತು. ಪದವಿ ವಿಭಾಗದ ಉಪನ್ಯಾಸಕರಾದ ಮಂಜುನಾಥ್, ಪಲ್ಲವಿ, ಚೈತ್ರ ಭರತನಾಟ್ಯವನ್ನು ಪ್ರಸ್ತುತ ಪಡಿಸಿದರು. ಈ ಕಾರ್ಯಕ್ರಮದಲ್ಲಿ ವಾಣಿಜ್ಯ ವಿಭಾಗದ ಡೀನ್ ಉಮೇಶ್ ಶೆಟ್ಟಿ, ಭಾಷಾ ವಿಭಾಗದ ಡೀನ್ ಡಾ| ರಾಜೀವ್, ಸ್ನಾತಕೋತ್ತರ ಬಯೋಟೆಕ್ನಾಲಜಿ ವಿಭಾಗದ ಮುಖ್ಯಸ್ಥ ಡಾ.ರಾಮ್ ಭಟ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕನ್ನಡ ವಿಭಾಗದ ಮುಖ್ಯಸ್ಥ ಮತ್ತು ಕಾರ್ಯಕ್ರಮದ ಸಂಯೋಜಕ ಪ್ರೊ. ಚಂದ್ರಶೇಖರ ಗೌಡ ನಿರೂಪಿಸಿದರು.