ಸಂವಿಧಾನ ಬದ್ಧ ಕರ್ತವ್ಯ- ಹಕ್ಕು ಪಾಲಿಸುವ ಸಂಕಲ್ಪ ದಿನ: ಹೊರಟ್ಟಿ
ವಿದ್ಯಾಗಿರಿ(ಮೂಡುಬಿದಿರೆ): ವಿಶಾಲ ಬಯಲುರಂಗ ಮಂದಿರದಲ್ಲಿ ಕಂಗೊಳಿಸಿದ ದೇಶದ ಐಕ್ಯತೆಯ ಪ್ರತೀಕವಾದ ‘INDIA’ , ಸೇರಿದ್ದ 30 ಸಾವಿರಕ್ಕೂ ಅಧಿಕ ವಿದ್ಯಾರ್ಥಿ, ಸಿಬ್ಬಂದಿ ಅತಿಥಿಗಳ ಕೈಯಲ್ಲಿ ಹಾರಾಡಿದ ರಾಷ್ಟ್ರ ಧ್ವಜ, ಆವರಣದ ಸುತ್ತಲೂ ತ್ರಿವರ್ಣ ಸ್ಥಂಭಗಳು, ದೇಶಪ್ರೇಮ ಮೂಡಿಸುವ ತ್ರಿವರ್ಣ ಚಿತ್ತಾರಗಳು, ತ್ರಿವರ್ಣದ ಪುರುಲಿಯೋ ಸಿಂಹಗಳು, ಜನ ಗಣ ಮನ, ವಂದೇ ಮಾತರಂ, ಕೋಟಿ ಕಂಠೋ ಸೇ… ರಾಷ್ಟ್ರ ಹಾಗೂ ದೇಶಭಕ್ತಿ ಗೀತೆಗಳು….
ಸಂವಿಧಾನ ಅನುಷ್ಠಾನದ ಭಕ್ತಿ, ಗೌರವ, ಪ್ರೀತಿಯ ದೇಶಭಕ್ತಿಯ ಕ್ಷಣಗಳು ಇಲ್ಲಿನ ಪುತ್ತಿಗೆ ವಿವೇಕಾನಂದ ನಗರದ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ(ರಿ.) ಹಮ್ಮಿಕೊಂಡ 76ನೇ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಮೂಡಿಬಂತು.
ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ಕರ್ನಾಟಕ ವಿಧಾನ ಪರಿಷತ್ತಿನ ಸಭಾಧ್ಯಕ್ಷ ಬಸವರಾಜ ಹೊರಟ್ಟಿ ಮಾತನಾಡಿ,’ನಾವೆಲ್ಲರೂ ಸಂವಿಧಾನ ಬದ್ಧವಾಗಿ ಕರ್ತವ್ಯ ಹಾಗೂ ಹಕ್ಕುಗಳನ್ನು ಪಾಲಿಸುವ ಸಂಕಲ್ಪವನ್ನು ಮಾಡುವ ದಿನ ಇದಾಗಿದೆ’ ಎಂದರು.
‘ಆಳ್ವಾಸ್ ಅಂಗಣದಲ್ಲಿ ಗಣರಾಜ್ಯೋತ್ಸವವು ಐತಿಹಾಸಿಕ ವಿರಾಟ ರಾಷ್ಟ್ರೀಯ ಹಬ್ಬವಾಗಿದೆ’ ಎಂದು ಅವರು ಸಂಭ್ರಮಿಸಿದರು.
‘ಶಿಕ್ಷಣದ ಜೊತೆ ಸಂಸ್ಕಾರ ನೀಡುವ ಆಳ್ವಾಸ್, ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಯ ತಾಣವಾಗಿದೆ’ ಎಂದು ಶ್ಲಾಘಿಸಿದರು.
ಹುಟ್ಟಿದ ಊರು, ಹೆತ್ತ ತಂದೆ-ತಾಯಿ, ಕಷ್ಟ ಕಾಲದಲ್ಲಿ ನೆರವಾದವರು, ಕಲಿಸಿದ ಶಿಕ್ಷಕರು ಹಾಗೂ ಸಂಸ್ಥೆಯನ್ನು ಎಂದೂ ಮರೆಯಬೇಡಿ ಎಂದು ಹಿತವಚನ ಹೇಳಿದರು.
ಡಾ.ಅಂಬೇಡ್ಕರ್ ನೇತೃತ್ವದಲ್ಲಿ ವಿಶ್ವದ ಶ್ರೇಷ್ಠವಾದ ನಮ್ಮ ಸಂವಿಧಾನ ರಚನೆಯಾಗಿ, ಜಾರಿಗೆ ಬಂದಿದೆ. ಇದು ನಮ್ಮ ದೇಶಕ್ಕೆ ಶಕ್ತಿ ತುಂಬಿದ ದಿನ ಎಂದು ಬಾಬಾಸಾಹೇಬರ ಗುಣಗಾನ ಮಾಡಿದರು.
ಸಂವಿಧಾನವು ಪ್ರತಿಯೊಬ್ಬರಿಗೆ ಶಿಕ್ಷಣ, ಧಾರ್ಮಿಕ, ಅಭಿವ್ಯಕ್ತಿ, ಮೂಲ ಸೌಕರ್ಯಗಳನ್ನು ನೀಡಿದೆ. ಸಂವಿಧಾನವೇ ನೆಲದ ಸರ್ವೋಚ್ಛ ಕಾನೂನು. ನಾವೆಲ್ಲ ಶ್ರದ್ಧೆಯಿಂದ ಗೌರವಿಸಬೇಕು ಎಂದರು.
ದೇಶವು ವಿಜ್ಞಾನ -ತಂತ್ರಜ್ಞಾನ, ಆರ್ಥಿಕವಾಗಿ ಎಷ್ಟೇ ಮುಂದುವರಿದರೂ ನಮಗೆ ಎಲ್ಲ ಹಕ್ಕುಗಳನ್ನು ನೀಡಿದ, ನಮಗೆ ಅಸ್ತಿತ್ವ ನೀಡಿದ ಸಂವಿಧಾನವನ್ನು ಗೌರವಿಸಬೇಕು. ಸಂವಿಧಾನ ದೇಶದ ಏಕತೆಯ ಪ್ರತೀಕ. ಅದರ ರಚನೆಯ ನೇತೃತ್ವ ವಹಿಸಿದ ಅಂಬೇಡ್ಕರ್, ಸ್ವಾತಂತ್ರದ ನೇತೃತ್ವ ವಹಿಸಿದ ಗಾಂಧೀಜಿ ಸೇರಿದಂತೆ ಸ್ವಾತಂತ್ರ್ಯ ಹೋರಾಟಗಾರರಿಗೆ ನಾವೆಲ್ಲ ಕೃತಜ್ಞರಾಗಿರಬೇಕು ಎಂದು ಸ್ಮರಿಸಿದರು.
ಹಕ್ಕು ಮತ್ತು ಕರ್ತವ್ಯ ನಿರ್ವಹಿಸುವ ಸಂಕಲ್ಪದ ಪ್ರಮುಖ ದಿನಾಚರಣೆ ಮೂಲಕ ದೇಶಭಕ್ತಿ ಜಾಗೃತವಾಗಲಿ ಎಂದು ಹಾರೈಸಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಪ್ರಧಾನ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ, ಮಾಜಿ ಸಚಿವ ಅಭಯಚಂದ್ರ ಜೈನ್, ಭಾರತ ನಿರ್ಮಾಣ ಸಂಸ್ಥೆಯ ಮುಸ್ತಾಫ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿಗಳಾದ ವಿವೇಕ್ ಆಳ್ವ ಮತ್ತು ವಿನಯ್ ಅಳ್ವ, ಎನ್ ಸಿಸಿ 19 ಕರ್ನಾಟಕ ಬೆಟಾಲಿಯನ್ ಕಮಾಂಡಿಂಗ್ ಅಧಿಕಾರಿ ಕರ್ನಲ್ ಮುಕುಂದನ್, 18 ಕರ್ನಾಟಕ ಬೆಟಾಲಿಯನ್ ಆಡಳಿತಾಧಿಕಾರಿ ಲೆ. ಕರ್ನಲ್ ರೋಹಿತ್ ರೈ, 300ಕ್ಕೂ ಅಧಿಕ ನಿವೃತ್ತ ಹಾಗೂ ಹಾಲಿ ಸೈನಿಕರು, ಕಬ್ಸ್- ಬುಲ್ ಬುಲ್, ಸ್ಕೌಟ್ಸ್ -ಗೈಡ್ಸ್ , ರೋವರ್ಸ್- ರೇಂಜರ್ಸ್ ಹಾಗೂ ವಿದ್ಯಾರ್ಥಿಗಳು, ಬೋಧಕ- ಬೋಧಕೇತರ ಸಿಬ್ಬಂದಿ ಇದ್ದರು.
ಸಮಾರಂಭವು ಸಮಯ ಪರಿಪಾಲನೆಯನ್ನು ಸಾಕ್ಷೀಕರಿಸಿತು. ತಿರಂಗ ಬಣ್ಣದಿಂದ 1920 ವಿದ್ಯಾರ್ಥಿಗಳು ಸುತ್ತಲೂ ಅಂಚನ್ನು ನಿರ್ಮಿಸಿದರೆ, 3188 ವಿದ್ಯಾರ್ಥಿಗಳು ತಿರಂಗದಲ್ಲಿ ‘INDIA’ ರಚಿಸಿ ಭಾವೈಕ್ಯತೆಯ ಸಂದೇಶ ರವಾನಿಸಿದರು.
ರಾಹುಲ್ ಆರ್. ನೇತೃತ್ವದಲ್ಲಿ ಎನ್ ಸಿಸಿ ಕೆಡೆಟ್ ಗಳು ಗೌರವ ರಕ್ಷೆ ಸಲ್ಲಿಸಿದರು. ವಂದೇ ಮಾತರಂ, ಜನಗಣಮನ ಹಾಗೂ ಕೋಟಿ ಕಂಟೋ ಸೇ ಗಾಯನ, ಬ್ಯಾಂಡ್ ನಿನಾದವು ಭಾವೈಕ್ಯತೆ ಮೂಡಿಸಿತು. ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಕನ್ನಡ ಡೀನ್ ಕೆ.ವೇಣುಗೋಪಾಲ ಶೆಟ್ಟಿ, ಇಂಗ್ಲಿಷ್ ಉಪನ್ಯಾಸಕ ರಾಜೇಶ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.