ಆರೋಗ್ಯಕ್ಕೆ ಪೌಷ್ಟಿಕ ಆಹಾರ ಸೇವನೆ ಅಗತ್ಯ: ಪ್ರೊ. ಧರ್ಮ

ಕ್ಷೇಮ ಮತ್ತು ಅನಾರೋಗ್ಯದಲ್ಲಿ ಪೌಷ್ಟಿಕ ಚಿಕಿತ್ಸೆಯ ಸಮಗ್ರ ವಿಧಾನ: ವಿಚಾರಸಂಕಿರಣ

ವಿದ್ಯಾಗಿರಿ (ಮೂಡುಬಿದಿರೆ): ನಮ್ಮ ದೇಹಕ್ಕೆ ಬೇಕಾದ ಆಹಾರದ ಬದಲಾಗಿ, ಮಾರುಕಟ್ಟೆ ನಿರ್ಧರಿಸುವ ಆಹಾರ ಸೇವಿಸುವ ಸ್ಥಿತಿಗೆ ನಾವು ಬಂದಿದ್ದೇವೆ ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಲ್. ಧರ್ಮ ಹೇಳಿದರು.

ಐಎಪಿಇಎನ್ ಇಂಡಿಯಾದ ಮಂಗಳೂರು ಘಟಕದ ಸಹಕಾರದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ(ರಿ)ದ ಆತಿಥ್ಯದಲ್ಲಿ ಆಹಾರ, ಪೌಷ್ಟಿಕ ಮತ್ತು ಆಹಾರಪದ್ಧತಿಯ ಪದವಿ ಮತ್ತು ಸ್ನಾತಕೋತ್ತರ ವಿಭಾಗಗಳು ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದ ಡಾ.ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡ ‘ಕ್ಷೇಮ ಮತ್ತು ಅನಾರೋಗ್ಯದಲ್ಲಿ ಪೌಷ್ಟಿಕ ಚಿಕಿತ್ಸೆಯ ಸಮಗ್ರ ವಿಧಾನ’ ಕುರಿತ ಅಂತರರಾಷ್ಟ್ರೀಯ ವಿಚಾರಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂದು ವೈದ್ಯರು ತಿಳಿಸುವ ಆಹಾರದ ಬದಲು, ಧಾರ್ಮಿಕ ಹಾಗೂ ರಾಜಕೀಯ ಮುಖಂಡರು ನಮ್ಮ ಆಹಾರವನ್ನು ನಿರ್ಧಾರ ಮಾಡುತ್ತಿದ್ದಾರೆ. ಬಹುರಾಷ್ಟ್ರೀಯ ಆಹಾರ ವಿತರಣಾ ಕಂಪೆನಿಗಳು ನಮ್ಮ ಮೆನುವನ್ನು ನಿರ್ಧಾರ ಮಾಡುತ್ತಿವೆ ಎಂದು ಬೇಸರ ವ್ಯಕ್ತ ಪಡಿಸಿದರು.

ಹಿಂದೆ ಗಂಜಿ ಊಟದಂತಹ ಆಹಾರ ಪದ್ಧತಿಗೆ ಹೊಂದಿಕೊಂ ಡಿದ್ದ ನಮ್ಮ ಹಿರಿಯರು ಆರೋಗ್ಯವಾಗಿದ್ದರು. ಆದರೆ, ಈಗ ಜಂಕ್‌ಫುಡ್ ಹೆಚ್ಚಾಗಿದ್ದು, ಮಂಗಳೂರಿನಲ್ಲಿಯೇ 2,400 ಕ್ಕೂ ಅಧಿಕ ಮಂದಿ ಆಹಾರ ಸರಬರಾಜು (ಡೆಲಿವರಿ ಬಾಯ್ಸ್) ಕೆಲಸದಲ್ಲಿ ತೊಡಗಿದ್ದಾರೆ. ಇಂತಹ ಆಹಾರ ಸರಬರಾಜು ಮಾಡುವ ಸಂಸ್ಥೆಗಳು ಪ್ರತಿ ವರ್ಷ ಶೇಕಡಾ 12.5ರಷ್ಟು ಹೆಚ್ಚಳವಾಗುತ್ತಿವೆ ಎಂದರು.

ನಮ್ಮನ್ನು ನಾವು ರಕ್ಷಿಸಿಕೊಂಡಷ್ಟು ಬೇರೆ ಯಾರು ನಮ್ಮನ್ನು ಸಂರಕ್ಷಿಸಲಾರರು. ದಿನಕ್ಕೆ ಒಂದು ಸೇಬು ವೈದ್ಯರನ್ನು ದೂರವಿಡುತ್ತದೆ ಎಂಬುದು ಮಾರುಕಟ್ಟೆ ಪ್ರೇರಿತ ನಾಣ್ನುಡಿಯಾಗಿದೆ. ಬದಲಾಗಿ ಮನೆಯಲ್ಲಿ ತಯಾರಾದ ಪಾರಂಪರಿಕ ಆಹಾರ ನಮ್ಮನ್ನು ಆರೋಗ್ಯವಂತರನ್ನಾಗಿ ಇಡಬಲ್ಲದು ಎಂದರು.

ಐಎಪಿಇಎನ್ ಇಂಡಿಯಾದ ಅಧ್ಯಕ್ಷ ಡಾ. ಪಿ.ಸಿ. ವಿಜಯಕುಮಾರ್ ಮಾತನಾಡಿ, ಮನುಷ್ಯನಿಗೆ ಆರೋಗ್ಯ ಬಹುಮುಖ್ಯ. ಅದನ್ನು ನಾವು ಸರಿಯಾದ ರೀತಿಯಲ್ಲಿ ಕಾಪಾಡಿಕೊಳ್ಳಬೇಕು. ಆದರೆ ಇಂದಿನ ದಿನಗಳಲ್ಲಿ ಮನೆಯಲ್ಲಿ ಅಡುಗೆ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಾ ಬಂದಿದೆ ಎಂದರು.

ಆರ್ಥಿಕ ಅಭಿವೃದ್ಧಿ ಹೊಂದಿದಂ ತೆ ಮನುಷ್ಯ ಸುಖ ಅನುಭವಿಸುತ್ತಾನೆ. ಜೀವನಶೈಲಿಯ ಬದಲಾವಣೆಯಿಂದ ಆಹಾರದಲ್ಲಿ ವ್ಯತ್ಯಯ ಉಂಟಾಗಿ ಸಮಸ್ಯೆಗೆ ಈಡಾಗುತ್ತಾನೆ. ಅದಕ್ಕಾಗಿ ಆಹಾರದ ಬಗ್ಗೆ ಎಚ್ಚರ ಅವಶ್ಯ. ಪೌಷ್ಟಿಕ ಆಹಾರದಿಂದ ಆರೋಗ್ಯಕರ ಬದುಕು ಸಾಧ್ಯ ಎಂದರು.

ಆಳ್ವಾಸ್(ಸ್ವಾಯತ್ತ) ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಮಾತನಾಡಿ, ಯುವಜನತೆಯ ಆಹಾರ ಬುಟ್ಟಿಯು ಅನಾರೋಗ್ಯ ಈಡುಮಾಡುವ ವಸ್ತುಗಳಿಂದ ತುಂಬಿವೆ. ಅವರಿಗೆ ರಾಸಾಯನಿಕ ಬಳಸಿದ, ಕರಿದ ತಿಂಡಿಗಳೇ ಹೆಚ್ಚು ಪ್ರಿಯವಾಗಿದೆ. ಹೀಗಾಗಿ ಹೊಟ್ಟೆಗೆ ಮಲೀನವೇ ಹೆಚ್ಚು ಸೇರುತ್ತಿದೆ ಎಂದರು.

ಐಎಪಿಇಎನ್ ಇಂಡಿಯಾ ಉಪಾಧ್ಯಕ್ಷ ಶಿವ್‌ಶಂಕರ್ ತಿಮ್ಮರ್‌ಪ್ಯಾಟಿ, ಎನ್‌ಇಸಿ ಸದಸ್ಯರಾದ ಶ್ರೀಮತಿ ವೆಂಕಟರಾಮನ್, ಆಳ್ವಾಸ್ (ಸ್ವಾಯತ್ತ) ಕಾಲೇಜು ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ವಿಭಾಗದ ಮುಖ್ಯಸ್ಥೆ ಡಾ ಅರ್ಚನಾ ಪ್ರಭಾತ್ ಇದ್ದರು.

ಅಂತರರಾಷ್ಟ್ರೀಯ ವಿಚಾರಸಂಕಿರಣದ ಅಂಗವಾಗಿ 4 ವಿಜ್ಞಾನ ಅಧಿವೇಶನಗಳು ನಡೆದವು. ಶ್ರೀಲಂಕಾ, ದುಬೈ, ಮುಂಬೈ, ಉತ್ತರ ಪ್ರದೇಶ, ಮಣಿಪಾಲದಿಂದ ಬಂದ ಸಂಪನ್ಮೂಲ ವ್ಯಕ್ತಿಗಳು ವಿಷಯ ಮಂಡಿಸಿದರು. ದೇಶದ ವಿವಿಧ ಭಾಗಗಳಿಂದ 500ಕ್ಕೂ ಅಧಿಕ ಪ್ರತಿನಿಧಿಗಳು ಬಂದಿದ್ದರು.

ಸಮಾರೋಪ ಸಮಾರಂಭದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ ಆಳ್ವ ಪಾಲ್ಗೊಂಡರು.

ಐಎಪಿಇಎನ್ ಇಂಡಿಯಾ ಮಂಗಳೂರು ಘಟಕದ ಅಧ್ಯಕ್ಷ ವಾಸುದೇವ ಭಟ್ ಸ್ವಾಗತಿಸಿದರು. ಹರ್ಷಿತಾ ನಿರೂಪಿಸಿದರು. ಸಹಾಯಕ ಪ್ರಾಧ್ಯಾಪಕಿ ಕಾರ್ತೀಕ ದೇವಿ ವಂದಿಸಿದರು.